Tuesday, 21 May 2019

ಕರಗಾಂವದ ಬೀರದೇವರ ದೇವಸ್ಥಾನದ ಪರಿಚಯ ಮತ್ತು ಹಿನ್ನೆಲೆ

 ಕರಗಾಂವದ ಬೀರದೇವರ ದೇವಸ್ಥಾನ :ಪರಿಚಯ ಮತ್ತು ಹಿನ್ನೆಲೆ
ಕರಗಾಂವ ಎಂದರೆ ತಟ್ಟನೆ ಹೊಳೆಯುವುದು ಕರಗಾಂವದ ಬೀರದೇವರು. ಕರಗಾಂವ ಇದು ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲ್ಲೂಕಿನ ಒಂದು ಗ್ರಾಮ. ಇದು ಚಿಕ್ಕೋಡಿ  ಪಟ್ಟಣದಿಂದ  18 ಕಿ. ಮೀ ಅಂತರದಲ್ಲಿದೆ. ಕರಗಾಂವ ಗ್ರಾಮದ ಬೀರದೇವರ ದೇವಸ್ಥಾನ ಉತ್ತರ ಕರ್ನಾಟಕ ಹಾಗೂ ದಕ್ಷಿಣ ಮಹಾರಾಷ್ಟ್ರ ಭಾಗಗಳಲ್ಲಿ ಭಕ್ತ ಸಮೂಹ ಹೊಂದಿದೆ. ಈಗ ಇರುವ ಕರಗಾಂವ ಗ್ರಾಮ ಕ್ಕಿಂತ ಮೈದಲು ಇಲ್ಲಿಂದ ಸುಮಾರು 2 ಮೈಲಿ ಅಂತರದಲ್ಲಿ "ಚೆನ್ನವೀರಹಟ್ಟಿ" ಎಂಬ ಒಂದು ಪ್ರದೇಶವಿತ್ತು. ಆ ಚೆನ್ನವೀರಹಟ್ಟಿಯನ್ನು ಒಬ್ಬ ಗೌಡ ಆಳುತ್ತಿದ್ದ, ಆ ಗೌಡನ ಮನೆಯಲ್ಲಿ ದೊಡ್ಡ ಆಕಳುಗಳ ಹಿಂಡು ಇತ್ತು. ಈ ಆಕಳುಗಳ ಹಿಂಡು ದಿನನಿತ್ಯ ಮೇಯಲು ಈಗಿರುವ ಕರಗಾಂವ ಗ್ರಾಮದ ಪ್ರದೇಶದ ವ್ಯಾಪ್ತಿಯಲ್ಲಿ ಬರುತ್ತಿತ್ತು.  ಆ ಕಾಲದಲ್ಲಿ ಕರಗಾಂವ ಗ್ರಾಮದ ಪ್ರದೇಶದಲ್ಲಿ ಅತಿಯಾದ ಪಡುಗಳ್ಳಿ ಇತ್ತು.ಇಲ್ಲಿ ಮೇಯಲು ಎಲ್ಲ ಜನರ ದನಕರುಗಳು ಬರುತ್ತಿದ್ದವು. ಅಲ್ಲಿಯೇ ಗೌಡನ ಆಕಳುಗಳು ಕೂಡಾ ಮೇಯಲು ಬರುತ್ತಿದ್ದವು. ಹೀಗೆ ಬರುವ ಆಕಳುಗಳ ಹಿಂಡು ಹೊಟ್ಟೆ ತುಂಬಾ ಮೇಯ್ದು ಸಾಯಂಕಾಲ ಮನೆಗೆ ಹೋಗುತ್ತಿದ್ದವು. ಒಂದು ದಿನ ಗೌಡನು ಎಂದಿನಂತೆ ಆಕಳ ಹಾಲು ಹಿಂಡಲು ಮುಂದಾಗುತ್ತಾನೆ. ಅಲ್ಲಿರುವ ಎಲ್ಲ ಆಕಳುಗಳು ಎಂದಿನಂತೆ ಹಾಲನ್ನು ನೀಡುತ್ತವೆ. ಆದರೆ ಒಂದು ಆಕಳು ಮಾತ್ರ ಹಾಲನ್ನು ಕೊಡಲಿಲ್ಲ. ಹೀಗೆ ಎರಡು ಮೂರು ದಿನಗಳ ಕಾಲ ಆಕಳು ಹಾಲನ್ನು ನೀಡಲಿಲ್ಲ. ಸಂಶಯಗೊಂಡ ಗೌಡನು  ಆಕಳುಗಳು ಮೇಯುವ ಸ್ಥಳಕ್ಕೆ ಬಂದ  ಆಕಳುಗಳ ಹಿಂಡು ಎಲ್ಲವೂ ಎಂದಿನಂತೆ ಮೇಯಲು ಪ್ರಾರಂಬಿಸಿತು. ಆದರೆ ಒಂದು ಕಪ್ಪು ಆಕಳು  ಈಗ ಇರುವ ಬೀರದೇವರ ದೇವಸ್ಥಾನ ಜಾಗದಲ್ಲಿ ಮೊದಲು ದಟ್ಟ ಪಡುಗಳ್ಳಿ ಬೆಳೆಯುತ್ತಿತ್ತು ಈ ಕಳ್ಳಿಯಲ್ಲಿ ಒಂದು ಹಾವಿನ ಗುತ್ತಿ ಇತ್ತು ಅದರ ಮೇಲೆ ಆಕಳು ಹಾಲು ನೀಡುವ ದೃಶ್ಯವನ್ನು ಆ ಗೌಡ ಕಣ್ಣಾರೆ ಕಂಡು  ಆಶ್ಚರ್ಯಚಕಿತನಾದನು. ಸಂತೋಷದಿಂದ ಓಡಿ ಹೋಗಿ ಚನ್ನವೀರಟ್ಟಿ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಜನರಿಗೆ ಸುದ್ದಿ ತಿಳಿಸಿದ. ಸುದ್ದಿ ಗಾಳಿಸುದ್ದಿಯಂತೆ ಎಲ್ಲಕಡೆ ಹರಡಿತು ಸಾಕಷ್ಟು ಜನರು ಬಂದು ದಿನನಿತ್ಯ ಆಕಳು ಗುತ್ತಿಯ ಮೇಲೆ ಹಾಲು ನೀಡುವ ದೃಶ್ಯ ನೋಡಿದರು. ಎಲ್ಲರೂ ಯೋಚನೆ ಮಾಡಿ ಗುತ್ತಿಯಲ್ಲಿ ಏನಿರಬೇಕೆಂದು ತಿಳಿದುಕೊಳ್ಳಲು ಕುತೂಹಲದಿಂದ ಗುತ್ತಿ ಅಗೆದು ಅಲ್ಲಿ ಹುತ್ತದಲ್ಲಿ ಋಷಿ ರೂಪದ ವ್ಯಕ್ತಿ ಕಾಣಸಿಗುತ್ತಾನೆ. ಆಗ ಎಲ್ಲ ಜನರು ಈ ವ್ಯಕ್ತಿ ಸಾಮಾನ್ಯ ವ್ಯಕ್ತಿಅಲ್ಲ ಅವನು ಮಹಾನ್ ಋಷಿಮುನಿ  ಎಂದು ಅವನಿಗೆ ಖರೇಸಿದ್ದ ಎಂದು ನಾಮಕರಣ ಮಾಡಿದರು. ಮುಂದೆ  ಅದೇ ಜಾಗದಲ್ಲಿ ದೇವಸ್ಥಾನ ಕಟ್ಟಿಸಿ ಖರೇಸಿದ್ದನ ಪೂಜಾ ಕಾರ್ಯಗಳು  ನೆರವೇರುತ್ತವೆ. ಮುಂದೆ ಜನರ ಆಡು ಭಾಷೆಯಲ್ಲಿ ಕರಿಸಿದ್ದ ಎಂದು ಹೆಸರು ಪ್ರಚಲಿತಗೊಳ್ಳುತ್ತದೆ. ಗ್ರಾಮಕ್ಕೆ ಕೂಡಾ ಖರೇಗಾಂವ ಎಂಬ ಹೆಸರು ಬರುತ್ತದೆ ಮುಂದೆ ಕ್ರಮೇಣ ಕರಗಾಂವ ಎಂಬ ಹೆಸರು ರೂಡಿಗೆ ಬರುತ್ತದೆ. ಅಂದಿನಿಂದ ಇಂದಿನವರೆಗೆ ದೇವಸ್ಥಾನದ ಬೆಳವಣಿಗೆ ಕರ್ನಾಟಕದಲ್ಲಿ ಬೆಳಗಾವಿ, ಬಾಗಲಕೋಟೆ, ವಿಜಯಪುರ, ಗದಗ, ಹಾವೇರಿ, ಧಾರವಾಡ ಮತ್ತು ಮಹಾರಾಷ್ಟ್ರದಲ್ಲಿ ಸಾಂಗ್ಲಿ, ಕೊಲ್ಲಾಪುರ, ಪುಣೆ, ಸೊಲ್ಲಾಪುರ ಜಿಲ್ಲೆಗಳಿಂದ ಬಹುಸಂಖ್ಯಾತ ಜನರು ದೇವರ ದರ್ಶನಕ್ಕೆ ಬರುತ್ತಾರೆ.

ಉಸ್ತುವಾರಿ - ಕರಗಾಂವ ಗ್ರಾಮದ ಬೀರದೇವರ ದೇವಸ್ಥಾನದ ಉಸ್ತುವಾರಿ ಕರಗಾಂವದ ಡಿ ಟಿ ಪಾಟೀಲ ಕರಗಾಂವ, ಎಸ್ ಆರ್ ಪಾಟೀಲ ಕುಟುಂಬಗಳು ಹೊತ್ತಿದ್ದು, ಪೂಜಾ ಕಾರ್ಯವನ್ನು ಕುರುಬ ಸಮುದಾಯದ ಜನರು ನಿರ್ವಹಿಸುತ್ತಾರೆ.

ಪವಾಡಗಳಿಗೆ ಪ್ರಸಿದ್ಧವಾದ ಕರಗಾಂವದ ಬೀರಸಿದ್ದೇಶ್ವರ ದೇವಾಲಯ-
ಕರಗಾಂವ ಗ್ರಾಮದ  ಐತಿಹಾಸಿಕ ಬೀರದೇವರು ಮೊದಲಿನಿಂದಲೂ ಗಾಂಜಾ ಸೇವಿಸುತ್ತಿರುವುದು ವಿಶೇಷ. ಸರ್ಕಾರದ ಕಾಯ್ದೆ ಕಾನೂನುಗಳ ಪ್ರಕಾರ ಗಾಂಜಾ ಸೇವನೆ ಬಳಕೆ ನಿಷೇಧ ಮಾಡಲಾಗಿದೆ ಕೆಲವು ದಶಕಗಳ ಹಿಂದೆ ಕೆಲವು ಪೋಲಿಸ್ ಅಧಿಕಾರಿಗಳು ಗಾಂಜಾ ತಡೆಯಲು ಬಂದಾಗ ಅವರ ಕಣ್ಣು ಕುರುಡಾಗಿ, ಅನಾರೋಗ್ಯ ಕಾಡಿತು ಆಗತಕ್ಷಣ ಬೇಡಿಕೊಂಡ ಪೋಲಿಸ್ ಅಧಿಕಾರಿ ದೇವರಿಗೆ ಪ್ರತಿ ವರ್ಷ ಗಾಂಜಾ ನೀಡಲು ಮುಂದಾಗುತ್ತಾನೆ ಆಗ ಕರಗಾಂವ ಗ್ರಾಮದ ಬೀರದೇವರ ಮಹಿಮೆಯಿಂದ  ಪೋಲಿಸ್ ಅಧಿಕಾರಿಗಳಿಗೆ  ಕಣ್ಣು ಬರುತ್ತವೆ ಅಂದಿನಿಂದ ಇಂದಿನವರೆಗೆ ಪೋಲಿಸ್ ಅಧಿಕಾರಿಗಳ ಕುಟುಂಬದವರು ದೇವರಿಗೆ ಗಾಂಜಾ ನೀಡುತ್ತಾರೆ. ಅವರಷ್ಟೆ ಅಲ್ಲ ಹಲವಾರು ಭಕ್ತರು ದೇವರಿಗೆ ಭಕ್ತಿಯಿಂದ ಗಾಂಜಾ ನೀಡುತ್ತಾರೆ.

ಹಲವು ವಿಶೇಷಗಳಿಗೆ ಸಾಕ್ಷಿ -
ಕರಗಾಂವದ ಬೀರದೇವರು ಅಪಾರ ಭಕ್ತ ಸಮೂಹ ಹೊಂದಿದ್ದಾನೆ. ಅನಾರೋಗ್ಯದಿಂದ ಬಳಲುತ್ತಿರುವ ವ್ಯಕ್ತಿಗಳು, ಗಾಳಿಯಾದ ವ್ಯಕ್ತಿಗಳು ದೇವರ ಆರಾಧನೆ ಮಾಡಿದರೆ ಸಂಪೂರ್ಣವಾಗಿ ಎಲ್ಲವೂ ಕಡಿಮೆಯಾಗುತ್ತದೆ. ಇನ್ನೂ ಬೇಡಿಕೊಂಡ ಎಲ್ಲ ಕಾರ್ಯಗಳು ಇಡೇರುತ್ತವೆ. ಪ್ರಮುಖವಾಗಿ ಉದಾಹರಣೆ ಎಂದರೆ ಮಕ್ಕಳಿಲ್ಲದ ದಂಪತಿಗಳು ದೇವರಿಗೆ ಭಕ್ತಿಯಿಂದ ನಡೆದುಕೊಂಡಾಗ ಅವರಿಗೆ ಮಕ್ಕಳಾದ ಅದೆಷ್ಟೋ ಉದಾಹರಣೆ ಈಗಲೂ ಚಾಲ್ತಿಯಲ್ಲಿವೆ. ವಿವಾಹ ಸಂಬಂಧಗಳು ಕೂಡಿ ಬರದ ವದು ವರರು ಬೇಡಿಕೊಂಡಾಗ ಅವರಿಗೆ  ವಿವಾಹ ಭಾಗ್ಯ ಒದಗಿಬಂದಿರುವ ಘಟನೆಗಳು ಕೂಡಾ ನೂರಾರು.
ಹೀಗೆ ನೀರಿನ ಭವನೆಯಿಂದ ತತ್ತರಿಸಿರುವ ವ್ಯಕ್ತಿಗಳು  ದೇವರ ಬಳಿ ಬಂದು ಬೇಡಿಕೊಂಡು ದೇವರ ನುಡಿ ಕೇಳಿದಾಗ, ಕವಲು ಹಾಕಿದಾಗ ಉತ್ತಮ ನೀರು ಲಭಿಸಿವೆ. ಹೀಗೆ ಜೀವನದ ಹಲವಾರು ಸಮಸ್ಯೆಗಳನ್ನು ಜನರು ದೇವರ ಬಳಿ ಕೇಳಿದಾಗ ದೇವರು ಎಲ್ಲರಿಗೂ ಪರಿಹಾರ ಒದಗಿಸಿದ್ದಾನೆ.

ಬೀರದೇವರ ನಾಯಕತ್ವ - ಕರಗಾಂವದ ಬೀರದೇವರು ಹಾಗೂ ನಾಗರಮುನ್ನೋಳಿಯ ಮತ್ತು ಕಬ್ಬೂರದ ಹಾಲಸಿದ್ದ ದೇವರುಗಳ ಮದ್ಯೆ ಯುದ್ಧ ನಡೆದಾಗ ಕರಗಾಂವ ಬೀರದೇವರು ಗೆಲುವು ಸಾಧಿಸಿದ್ದ ಎನ್ನುವ ಸಂಗತಿಗಳು ನಡೆದುಹೋಗಿದ್ದವು. ಹಾಗೆಯೇ ಯಡೂರ ಹೊಳೆಗೆ ದೇವರು ಹೋದಾಗ ಎಲ್ಲ ದೇವರುಗಳು   ಬಂದು ಕರಗಾಂವ ಬೀರದೇವರಿಗೆ ಶರನಾಗುತ್ತವೆ ಎಂಬ ವಿಚಾರ ಇನ್ನು ಜಾರಿಯಲ್ಲಿದೆ. ಕರಗಾಂವದ ಬೀರದೇವರು ಎಲ್ಲಾ ಧಾರ್ಮಿಕ ಕಾರ್ಯಗಳಲ್ಲಿ ಮುಂದಾಳತ್ವ ವಹಿಸಿದ್ದು  ಕೂಡಾ ನೋಡಬಹುದು. ಯಾದಗೂಡದ ಬೀರದೇವರು ಮತ್ತು ಕರಗಾಂವದ ಬೀರದೇವರಿಗೆ ಇನ್ನೂ ಕೊಡಾ ವೈಮನಸ್ಸು  ಇದೆ ಯಾದಗೂಡದ ಬೀರದೇವರಿಗೆ ಹೋಗಿ ಕರಗಾಂವದ ಬೀರದೇವರಿಗೆ ಹೋಗಬಾರದು ಎಂಬ ಮಾತು ಚಾಲ್ತಿಯಲ್ಲಿದೆ. ಇನ್ನೂ ಕೂಡಾ ಅಕ್ಕಪಕ್ಕದಲ್ಲಿ ಇರುವ ಯಾದಗೂಡದ ಬೀರದೇವರಿಗೆ ಕರಗಾಂವದ ಜನ ಹೆಚ್ಚಾಗಿ ಹೋಗುವುದಿಲ್ಲ. ಕರಗಾಂವದ ಬೀರದೇವರು ಸತ್ಯಕ್ಕೆ ಹೆಸರಾಗಿದ್ದಾನೆ.

ಅಮಾವಾಸ್ಯೆ, ಗುರುವಾರ, ರವಿವಾರದಂದು ಅಪಾರ ಭಕ್ತಗಣ ಬೇಟಿ-
ಕರಗಾಂವ ಗ್ರಾಮಕ್ಕೆ ದೂರ ದೂರದ ಊರುಗಳಿಂದ ಬರುವ ಭಕ್ತರು  ಅಮಾವಾಸ್ಯೆ, ದೇವರ ವಾರ ಗುರುವಾರ ಮತ್ತು ರವಿವಾರದಂದು ಸಹಸ್ರಾರು ಸಂಖ್ಯೆಯಲ್ಲಿ ಬೇಟಿನೀಡುತ್ತಾರೆ. ಆಗ ಭಕ್ತರಿಂದ ಭಕ್ತರಿಗಾಗಿ ಅನ್ನದಾಸೋಹ ಇರುತ್ತದೆ.
         ಭಕ್ತರೂ ತಮ್ಮ ಕುಟುಂಬದಲ್ಲಿ ಸಂಪತ್ತು ವೃದ್ದಿಸಿದ್ದಕ್ಕಾಗಿ ದೇವರ ಪಲ್ಲಕ್ಕಿಯನ್ನು   ಮನೆಮನೆಗೆ ಕರೆದುಕೊಂಡು ಹೋಗಿ ಅನ್ನದಾಸೋಹ ಮಾಡುತ್ತಾರೆ.

ವರ್ಷಕ್ಕೆ ಎರಡು ಭಾರಿ ಬೃಹತ್ ಜಾತ್ರೆ
ಕರಗಾಂವ ಗ್ರಾಮದಲ್ಲಿ ಒಂದೇ ದೇವರಿಗೆ ವರ್ಷದಲ್ಲಿ ಎರಡು ಭಾರಿ  ಬೃಹತ್ ಜಾತ್ರೆ ನಡೆಯುತ್ತದೆ. ಒಮ್ಮೆ ಮೇ ತಿಂಗಳಲ್ಲಿ ಆಗಿ ಹುಣ್ಣಿಮೆಯ ಮುಗಿದು ಮೂರನೇ ದಿನದಂದು ಹುಟ್ಟು ಹಬ್ಬ ಆಚರಣೆ ಮತ್ತು ದೀಪಾವಳಿಯಲ್ಲಿ    ಐದು ದಿನಗಳ ಬೃಹತ್ ಜಾತ್ರೆ ನಡೆಯುತ್ತದೆ.

ಹುಟ್ಟು ಹಬ್ಬ ಜಾತ್ರೆ ಆಚರಣೆ - ಪ್ರತಿವರ್ಷ ಆಗಿ ಹುಣ್ಣಿಮೆ ಆದ ಎರಡನೇ ದಿನದಂದು ಸಾಯಂಕಾಲ  ಎಲ್ಲ ಗ್ರಾಮಗಳಿಂದ ವಾಲಗ ಕೂಡುವುದು ನಂತರ ದೇವರ ಸಮ್ಮುಖದಲ್ಲಿ  ವಾದ್ಯ ಬಾರಿಸುವುದು. ರಾತ್ರಿ 10.00 ಗಂಟೆಗೆ ಡೊಳ್ಳಿನ ಪದ ಗಾಯನ, ಮರುದಿನ ನಸುಕಿನ ಜಾವ 05. 00 ಗಂಟೆಗೆ ಬೀರದೇವರ ಗದ್ದುಗೆಗೆ ಅಭಿಷೇಕ  ಕಾರ್ಯ, ತೊಟ್ಟಿಲೋತ್ಸವ, ಹೊವು ಹಾರಿಸುವುದು, ಪಲ್ಲಕ್ಕಿ ಮೆರವಣಿಗೆ, ದೇವರ ನುಡಿ, ಮಹಾಪ್ರಸಾದ ಹೀಗೆ ಹಲವಾರು ಕಾರ್ಯಕ್ರಮಗಳು ಜಾರಿಗೆ ಬರುತ್ತವೆ. ಜಾತ್ರೆ ಪ್ರಯುಕ್ತ ಜಾತ್ರಾ ಕಮಿಟಿಯಿಂದ ಸೈಕಲ್ ಶರ್ಯತ್ತು, ಕುದುರೆ ಶರ್ಯತ್ತು, ಎತ್ತಿನ ಬಂಡಿ ಶರ್ಯತ್ತು, ನಡೆಯುತ್ತವೆ. ಈ ದಿನ ರಾತ್ರಿ ಗ್ರಾಮದ ಬಯಲು ರಂಗಮಂದಿರದಲ್ಲಿ ಸಾಮಾಜಿಕ ನಾಟಕ ಪ್ರದರ್ಶನ ಆಗುತ್ತದೆ.

ದೀಪಾವಳಿ ಜಾತ್ರೆ -
ದೀಪಾವಳಿ ಜಾತ್ರೆಯು ಅತಿ ವಿಜ್ರಂಭಣೆಯಿಂದ ಜರುಗುತ್ತದೆ.  ಭರಮನ ಹಬ್ಬದ ದಿನದಂದು ದೇವರು ಗ್ರಾಮದ ಹೊರ ವಲಯದ ಬ್ರಹ್ಮ ದೇವರ ಗಿಡಕ್ಕೆ ಬೇಟಿ ನೀಡುತ್ತದೆ. ನಂತರ ಚತುರ್ದೇಶಿ ದಿನ, ಅಮಾವಾಸ್ಯೆ, ಪಾಡ್ಯ ದಂದು ಬೀರದೇವರ ದೇವಸ್ಥಾನದಲ್ಲಿ ವಿಶೇಷ ಪೂಜೆ ನೆರವೇರಿಸಲಾಗುತ್ತದೆ.   ನಂತರ ಮರುದಿನ   ದೇವರ ಪಲ್ಲಕ್ಕಿ ಗ್ರಾಮದಲ್ಲಿ ಮನೆಮನೆಗೆ ತೆರಳಿ ಅಂಬಲಿ ನೈವೇದ್ಯ ಪಡೆಯುತ್ತಾ ಸಾಗುತ್ತದೆ ಹೀಗೆ ಮೂರು ದಿನಗಳ   ಕಾಲ ಗ್ರಾಮದ ಎಲ್ಲ ಮನೆಗಳಿಗೆ ಸುತ್ತಿ ನೈವೇದ್ಯ ಪಡೆಯುತ್ತಾನೆ. ಗ್ರಾಮಸ್ಥರು ಬೆಳೆದ ಕಬ್ಬಿನ ಬೆಳೆಯನ್ನು ಮೆರವಣಿಗೆ ಮೂಲಕ ದೇವಸ್ಥಾನಕ್ಕೆ ಒಯ್ಯಲಾಗುತ್ತದೆ. ಗ್ರಾಮಸ್ಥರಿಂದ ಬಯಲು ರಂಗಮಂದಿರದಲ್ಲಿ ಸಾಮಾಜಿಕ ನಾಟಕ, ಪಾರಿಜಾತ, ಶಾಹಿರಗಾನ, ಡೊಳ್ಳು ಕುಣಿತ, ಡೊಳ್ಳಿನ ಪದಗಳು ಜರಗುತ್ತವೆ. ಭಕ್ತರು ಅಂಬಲಿ ಕೊಡಗಳ ಮೂಲಕ  ದೀಡ ನಮಸ್ಕಾರ ಹಾಕುತ್ತಾರೆ. ಜಾತ್ರೆಯ ದಿನದಂದು ದೇವರು ದೇವಸ್ಥಾನ ಸೇರುತ್ತದೆ, ದೇವನುಡಿ, ಮಹಾಪ್ರಸಾದ ಸೇವೆ, ಬೃಹತ್ ಕುಸ್ತಿ ಪಂದ್ಯಾವಳಿ ಹೀಗೆ ಹಲವಾರು ಚಟುವಟಿಕೆಗಳು  ಜರುಗುತ್ತವೆ.

ಕಲಾವಿದರಿಗೆ ಪ್ರೋತ್ಸಾಹ
ದೇವಸ್ಥಾನದಲ್ಲಿ ಡೊಳ್ಳು ಕುಣಿತ, ಡೊಳ್ಳಿನ ಪದಗಳು, ಭಜನಾ ಪದಗಳು, ಭಕ್ತಿಗೀತೆಗಳನ್ನೂ ಮಕ್ಕಳಿಗೆ ಕಲಿಸಿಕೊಟ್ಟು  ಅವರ ಕಲೆಗಳಿಗೆ ಪ್ರೋತ್ಸಾಹ ನೀಡುವ ಕಾರ್ಯವನ್ನು ಗ್ರಾಮದ ಪೂಜಾರಿಗಳು, ಕುರುಬ ಸಮುದಾಯದ ಮುಖಂಡರು ಮಾಡುತ್ತಾರೆ.

ಕೊನೆಯ ಮಾತು -
ದೇವರ ದೇವಸ್ಥಾನಕ್ಕೆ ಭಕ್ತರು ತನು ಮನ ಧನದಿಂದ ಭಕ್ತಿ ಸಲ್ಲಿಸಿ ದೇವರ ಏಳಿಗೆಗೆ ಕಾರಣಿಬೂತರಾಗಿದ್ದಾರೆ. ದೇವರ ದೇವಸ್ಥಾನ ಕೊಡಾ ಅತಿ ವೇಗದಿಂದ ಬೆಳವಣಿಗೆ ಹೊಂದುತ್ತಿದೆ. ಬೀರದೇವರ ಕುರಿತು ಚಿಕ್ಕ ಸಾಹಿತ್ಯ ರಚಿಸಿದ್ದಕ್ಕೆ ತುಂಬಾ ಸಂತೋಷ ಅನಿಸುತ್ತದೆ ಬೀರದೇವರ ಕಾರ್ಯಚಟುವಟಿಕೆಗಳ ಬಗ್ಗೆ ಎಷ್ಟು ಹೇಳಿದರೂ ಕಡಿಮೆ ಅನಿಸುತ್ತದೆ. ಆದರೂ ಉತ್ತಮ ಮಾಹಿತಿ ಕಲೆ ಹಾಕುವ ಯತ್ನ ಮಾಡಿದ್ದೇನೆ . ಆ ಬೀರದೇವರು ಎಲ್ಲರಿಗೂ ಒಳ್ಳೆಯದನ್ನು ಮಾಡಲಿ ಮಳೆ ಬೆಳೆ ಉತ್ತಮ ಆಗಲಿ ಅನ್ನೋದೇ ನನ್ನ ಆಶಯ. ಧನ್ಯವಾದಗಳು


ಭೈರಪ್ಪ ಹಾಲಪ್ಪಗೋಳ ಕರಗಾಂವ
ಬಿ ಎಸ್ ಡಬ್ಲ್ಯು ಹಾಗೂ ಎಂ.ಎಸ್ ಡಬ್ಲ್ಯು ಚಿನ್ನದ ಪದಕ ವಿಜೇತರು
ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ಬೆಳಗಾವಿ

Monday, 20 May 2019

ಕರಗಾಂವದ ಜಡಿಸಿಧ್ಧಾಶ್ರಮ ಮಠದ ಪರಿಚಯ ಮತ್ತು ಹಿನ್ನೆಲೆ

ಕರಗಾಂವದ ಜಡಿಸಿಧ್ಧಾಶ್ರಮ ಮಠದ  ಪರಿಚಯ ಮತ್ತು ಹಿನ್ನೆಲೆ-
                                ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲ್ಲೂಕಿನ ಕರಗಾಂವ ಗ್ರಾಮದ ಜಡಿಸಿದ್ದಾಶ್ರಮ ಮಠ  ಪವಾಡಗಳಿಗೆ   ಪ್ರಸಿದ್ಧವಾದ ಮಠ . ಕರಗಾಂವದ ಜಡಿಸಿದ್ದಾಶ್ರಮ  ಹಲವಾರು ಧಾರ್ಮಿಕ ಹಾಗೂ ಆಧ್ಯಾತ್ಮಿಕ ಕಾರ್ಯಕ್ರಮಗಳಿಗೆ ಪ್ರಸಿದ್ಧ. ಕರಗಾಂವ ಗ್ರಾಮದ ಪ್ರಮುಖ ಧಾರ್ಮಿಕ, ಆಧ್ಯಾತ್ಮಿಕ ಹಾಗೂ ಸೇವಾ ಕೇಂದ್ರ ಇದಾಗಿದೆ. ಈ ಮಠವು 1954 ರಲ್ಲಿ ಸ್ಥಾಪನೆಯಾಗಿದೆ ಇದಕ್ಕಿಂತ ಮೊದಲು ಕರಗಾಂವದಲ್ಲಿ ಜಡಿಸಿದ್ದೇಶ್ವರರ ಆರಾಧನೆ ನಡೆಯುತ್ತಿತ್ತು. ಈಗೀನ ಮಠದ ಸ್ಥಳದಲ್ಲಿ ಮೊದಲು ಚಿಕ್ಕದಾದ ಅಗ್ನಿಕುಂಡ ಮಾತ್ರ ವಿತ್ತು ಎಲ್ಲರೂ ಇದಕ್ಕೆ ನಮಸ್ಕರಿಸಿ ಹೋಗುತ್ತಿದ್ದರು. ಆಗ ಕಿರಿದಾದ ಜಾಗದಲ್ಲಿ ಪಡುಗಳ್ಳಿಗಳ ಮದ್ಯೆ ಈ ಅಗ್ನಿಕುಂಡ ಇತ್ತು ನಂತರ 1954 ರ ಹೊತ್ತಿಗೆ ಹ ಮಠದ ಈಗೀನ ಕಟ್ಟಡ ಕಟ್ಟಲು ಆರಂಭಿಸಿದರು . ಆಗ ಅದರ ಪ್ರಮುಖ ಶಿಲ್ಪಗಳೆಂದರೆ ಕರಿಂಸಾಬ್ ನದಾಫ್ ಅವರೊಂದಿಗೆ ವಡ್ಡರ ಸಮುದಾಯ ಹಾಗೂ ಇಡೀ ಗ್ರಾಮಸ್ಥರು ಈ ಮಠದ ಕಟ್ಟಡ ಕಟ್ಟಲು ಮುಂದೆ ಬಂದರು. ಮಠಕ್ಕೆ ಸಾಟಾ ಮಾಡಲು ಅಂಕಲಿ ಬಡಿಗರು ಕಾರ್ಯ ನಿರ್ವಹಿಸಿದ್ದರ. ಈ ಮಠವನ್ನು ಸ್ವತಃ ಶಂಕರಾನಂದ ಪರಮಹಂಸರು ನೇತೃತ್ವ ವಹಿಸಿ ಕಟ್ಟಿಸಿದ್ದು, ಅವರು ಮೇಲಿಂದ ಮೇಲೆ ಕರಗಾಂವ ಗ್ರಾಮಕ್ಕೆ ಭೇಟಿ   ನೀಡುತ್ತಿದ್ದರು.

ಮಠದ  ಪ್ರಾರಂಬಿಕ  ಪ್ರಮುಖ ಉಸ್ತುವಾರಿಗಳು -
                          ಶ್ರೀ  ಡಿ ಟಿ ಪಾಟೀಲ ಕರಗಾಂವ, ಎಸ್ ಆರ್ ಪಾಟೀಲ, ಬಾಪುಗೌಡ ಕಲಗೌಡ ಪಾಟೀಲ್, ಹರಿಬಲವಂತ ಕುಲಕರ್ಣಿ, ಅಪ್ಪಣ್ಣ ಕುಲಕರ್ಣಿ ಡೋಣವಾಡ, ಸಿದಗೌಡಾ ಗುರುಸಿದ್ದಗೌಡ ಪಾಟೀಲ, ಸಂತ ಮಹಾರಾಜ ಮಲ್ಲಪ್ಪ ಕೊಟ್ರೆ, ಬಾಬಾಜಿ ಸನದಿ, ಸಿದ್ದಪ್ಪ ಧರೆಪ್ಪಾ ಉಪ್ಪಾರ (ಹಾಲಪ್ಪಗೋಳ), ರಾವಸಾಹೇಬ ಖೋತ, ಗಣಪತಿ ಘೋರ್ಪಡೆ, ಚನ್ನಮಲ್ಲ ಕಮತೆ, ಅಪ್ಪಣ್ಣ ಬಡಿಗೇರ, ಬೀಮು ಬಡಿಗೇರ, ಬಸಪ್ಪ ಅಮ್ಮೀನಬಾಂವಿ ಪ್ರಮುಖರು. ಅಂದಿನಿಂದ ಇಂದಿನವರೆಗೆ ಹಲವಾರು ಮುಖಂಡರು, ಸಂತರು ಗ್ರಾಮಸ್ಥರು ದುಡಿಯುತ್ತಿದ್ದಾರೆ.

ಪವಾಡಗಳಿಗೆ ಪ್ರಸಿದ್ಧವಾಗಿದೆ ಈ ಜಡಿಸಿದ್ದಾಶ್ರಮ ಮಠ
                                 ಮೊದಲಿನಿಂದಲೂ ಆಧ್ಯಾತ್ಮಿಕ, ಧಾರ್ಮಿಕ, ಸೇವಾ ಕಾರ್ಯಗಳಿಗೆ ಈ ಕರಗಾಂವದ ಜಡಿಸಿದ್ದಾಶ್ರಮ ಹೆಸರುವಾಸಿ. ಇಲ್ಲಿ ಹಲವಾರು ಪವಾಡಗು   ನಡೆದು ಹೋಗಿವೆ. ಅವು ಸಾಕುಪ್ರಾಣಿಗಳಿಗೆ ಹಾವು ಕಚ್ಚುವುದು, ಜನರಿಗೆ ಹಾವು ಕಚ್ಚುವುದು ನಡೆದರೆ ಕರಗಾಂವ ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಹಾವು ಕಚ್ಚಿದ ವ್ಯಕ್ತಿ ಹಾಗೂ ಸಾಕುಪ್ರಾಣಿಗಳನ್ನು ತಂದು ಮಠದ ಐದು ಸುತ್ತು ಹಾಕಿ ಮಂತ್ರ, ಭಜನೆ ಮೂಲಕ ಆರಾಧನೆ ಮಾಡಿದರೆ ಹಾವಿನ ವಿಷ ಸಂಪೂರ್ಣವಾಗಿ ಕಡಿಮೆಯಾಗುತ್ತದೆ. ಇಂತಹ ಅದೆಷ್ಟೋ ಘಟನೆಗಳಿಗೆ ಈ ಜಡಿಸಿದ್ದಾಶ್ರಮ ಹೆಸರುವಾಸಿಯಾಗಿದೆ. ಹಾವು, ಚೇಳು ಸೇರಿ ವಿಷಜಂತುಗಳು ಕಡಿದರೂ ಈ ಭಾಗದ ಜನ ಈ ಮಠಕ್ಕೆ ನಡೆದುಕೊಂಡರೆ  ಎಲ್ಲವೂ ಪರಿಹಾರ ಆಗುತ್ತದೆ ಎಂಬ ನಂಬಿಕೆ ಈ ಗ್ರಾಮಸ್ಥರದ್ದು.  ಹಿಂದೆ ಸ್ವಾಮೀಜಿಗಳು ಮಠದ ಮಂತ್ರದ ಕಟ್ಟೆಗೆ ಹಾವು ಸುತ್ತಿಸಿ ಮಂತ್ರ ಹಾಕಿ, ಎರಡು ಬಾವಿಗೆ ಮಂತ್ರಹಾಕಿ     ಹೋಗಿದ್ದರು   ಅಂದಿನಿಂದ ಇಲ್ಲಿಯವರೆಗೆ  ಸುತ್ತಮುತ್ತಲಿನ ಗ್ರಾಮಸ್ಥರು ಈ ಮಠದ ದೇವರಿಗೆ ಭಕ್ತಿ ಪೂರ್ವಕವಾಗಿ  ನಡೆದುಕೊಳ್ಳುತ್ತಿದ್ದಾರೆ.  ಮಠ  ಕಟ್ಟಿಸುವ ಸಮಯದಲ್ಲಿ ಕಾರಣಾಂತರಗಳಿಂದ ಶಂಕರಾನಂದ ಶ್ರೀಗಳ  ಬೆರಳು ಕತ್ತರಿಸಿತ್ತು ಆಗ ಮುಪ್ಪಾದ ಮುದುಕ ಪರಮಹಂಸ ಬಿರುದು ನಿನಗೇಕೆ ಎಂದು ಕೇಳಿದ? ಹಿರಿಯ ಮುದುಕ ಮಾತನ್ನು ಮುಂದು ವರೆಸಿ  ನಿನಗೆ ಬೆರಳು ಬೇಕಾದರೆ ದೇವರಿಗೆ ಕಠಿಣ ತಪಸ್ಸಿನ ಮೂಲಕ ನಡೆದುಕೊ ಎಂದನು ಆಗ ಚಿಂತಿತರಾದ ಶಂಕರಾನಂದ ಶ್ರೀಗಳು ಕಠಿಣ ಮೂರು ತಿಂಗಳ  ತಪಸ್ಸಿನ ಮೂಲಕ  ತಮ್ಮ ಮೊದಲಿನ ಸ್ಥಿತಿಗೆ ತಮ್ಮ ಬೆರಳು ಚಿಗರೂಡೆದ ಘಟನೆ ಜಗತ್ತಿನಲ್ಲಿ ಒಂದು ಸಂಚಲನವನ್ನು ಮೂಡಿಸಿದ ಘಟನೆಯಾಗಿತ್ತು. ಆಗ ಇಂತಹ ಮಹಾನ್ ಪವಾಡ ದಿಂದ ಇವರಿಗೆ ಪರಮಹಂಸ ಎಂಬ ಬಿರುದು ಲಭಿಸಿತು.

ಧಾರ್ಮಿಕ ಮತ್ತು ಆಧ್ಯಾತ್ಮಿಕ ಕಾರ್ಯಕ್ರಮಗಳಿಗೆ ಪ್ರೋತ್ಸಾಹ -
                               ಜಡಿಸಿದ್ದಾಶ್ರಮ ಮಠದ ಮುಖ್ಯ ಮಠ ಜಡಿಸಿದ್ದಾಶ್ರಮ ಹುಬ್ಬಳ್ಳಿಯಲ್ಲಿ ಇದೆ. ಈ ಮಠವು  ಅದ್ವೈತ ಸಿದ್ಧಾಂತದ ತತ್ವಗಳನ್ನು ಪ್ರತಿಪಾದನೆ ಮಾಡುತ್ತಾ ಬರುತ್ತಿದೆ. ಶಂಕರಾನಂದ ಪರಮಹಂಸರು ಕೊಡಾ ಈ ಮಠದ ಬೆಳವಣಿಗೆಗೆ ಪ್ರಮುಖರು . ಗ್ರಾಮದಲ್ಲಿ ಯಾವುದೇ ಜಾತಿ, ಧರ್ಮ ಬೇದ ಬಾವ ವಿಲ್ಲದೆ ಮಠಕ್ಕೆ  ನಡೆದುಕೊಳ್ಳುತ್ತಾರೆ. 1960 ರ ಸಮಯದಲ್ಲಿ ಖಾತೆದಾರ ಮತ್ತು ಕುಲಕರ್ಣಿ ಕುಟುಂಬಗಳ ಮೂಲಕ ಕೃಷಿ ಶಿಬಿರ ನಡೆಸಲಾಗಿತ್ತು ಎಂದು ಗ್ರಾಮದ ಹಿರಿಯ ವ್ಯಕ್ತಿಗಳಲ್ಲಿ ಒಬ್ಬರಾದ ಬಾಬು ಕೊಟ್ರೆ ಅವರು ತಮ್ಮ ಅನುಭವಗಳನ್ನು ಹಂಚಿಕೊಳ್ಳುತ್ತಾರೆ. 1993 ರವರೆಗೆ ಮಾತ್ರ ಜಡಿಸಿದ್ದೇಶ್ವರ ಮಹಾರಾಜರ ಪುಣ್ಯತಿಥಿ ಆಚರಣೆ ನಡೆಸಲಾಗುತ್ತಿತ್ತು ಕಾರಣಾಂತರಗಳಿಂದ ಈ ಪುಣ್ಯತಿಥಿ ಸಮಾರಂಭ ನಿಂತು ತದನಂತರ 1994ರಿಂದ. ಈ ಮಠದಲ್ಲಿ  ವರ್ಷಕ್ಕೊಮ್ಮೆ  ಇಂಚಲದ ಶ್ರೀ ಶ್ರೀ ಶ್ರೀ ಶಿವಾನಂದ ಭಾರತಿ ಮಹಾಸ್ವಾಮಿಗಳು, ಪಿ ಜಿ ಹುಣಶ್ಯಾಳದ ಕೈವಲ್ಯಾಶ್ರಮದ  ನಿಜಗುಣ ಶ್ರೀಗಳು, ಹುಕ್ಕೇರಿಯ ಹೀರೇಮಠದ  ಶ್ರೀ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿಗಳು , ವಿಜಯಪುರದ ಶಿವಪುತ್ರಪ್ಪ ಸ್ವಾಮೀಜಿ, ಬೆಳಗಾವಿ ತಾಲ್ಲೂಕಿನ ಭೂತರಾಮನಹಟ್ಟಿಯ ಮುಕ್ತಿಮಠದ ಶ್ರೀಗಳು ಸೇರಿ ಹಲವಾರು ಆಧ್ಯಾತ್ಮಿಕ ಚಿಂತಕರನ್ನು ಒಳಗೊಂಡ ಬೃಹತ್ ಜ್ಞಾನಯಜ್ಞ ಹಾಗೂ ಸತ್ಸಂಗ ಸಮಾವೇಶ ನಡೆಸಲಾಗುತ್ತಿದೆ , ಸ್ಥಗಿತಗೊಂಡಿದ್ದ ಜಡಿಸಿದ್ದೇಶ್ವರ ಮಹಾರಾಜರ ಪುಣ್ಯತಿಥಿ ಆಚರಣೆ ಯನ್ನು 2019 ಮೇ 15 ರಂದು ಗ್ರಾಮಸ್ಥರ ಒತ್ತಾಯದ ಮೇರೆಗೆ ಆಚರಿಸಲು ಆರಂಭಿಸಲಾಗಿದೆ , ಶಂಕರಾನಂದ ಪರಮಹಂಸರು ಪುಣ್ಯತಿಥಿ ಆಚರಣೆ ಯನ್ನು  ಶ್ರಾವಣ ಮಾಸದಲ್ಲಿ ನೆರವೆರಿಸಲಾಗುತ್ತದೆ. ಜಡಿಸಿದ್ದೇಶ್ವರ ಮಹಾರಾಜರ ಪುಣ್ಯತಿಥಿ ಯಲ್ಲಿ ಜಡಿಸಿದ್ದೇಶ್ವರ ಮಹಾರಾಜರ ಪಲ್ಲಕ್ಕಿ ಮೆರವಣಿಗೆಯನ್ನು ಭಜನಾ ವಾದ್ಯಗಳ ಮೂಲಕ ಮನೆಮನೆಗೆ ನೈವೇದ್ಯ ಪಡೆಯುತ್ತಾ  ಗ್ರಾಮದಲ್ಲಿ ಪ್ರದಕ್ಷಿಣೆ ಹಾಕುತ್ತದೆ. ಅಂಬಲಿ ಕೊಡಗಳ ಮೂಲಕ ಮಹಿಳೆಯರು ನೈವೇದ್ಯ ತರುತ್ತಾರೆ. ಹೀಗೆ ಈ ಜಡಿಸಿದ್ದಾಶ್ರಮ ಆಶ್ರಮ ಹಲವಾರು ಧಾರ್ಮಿಕ ಮತ್ತು ಆಧ್ಯಾತ್ಮಿಕ ಕಾರ್ಯಕ್ರಮಗಳಿಗೆ ಪ್ರೋತ್ಸಾಹ ನೀಡುತ್ತದೆ.

 ಏಕತೆಯ ಸಂಕೇತ ಮತ್ತು ಕಲಾವಿದರಿಗೆ ಪ್ರೋತ್ಸಾಹ -
                               ಜಡಿಸಿದ್ದೇಶ್ವರ ನಾಟ್ಯ ಸಂಘ ಕೊಡಾ ಮಠ ಸ್ಥಾಪನೆಯಾದಾಗಿನಿಂದ ಇಂದಿನವರೆಗೆ ಪ್ರತಿ ವರ್ಷ ಬೀರದೇವರ ಜಾತ್ರೆ ಸಮಯದಲ್ಲಿ ನಾಟಕ ಪ್ರದರ್ಶನ ನೀಡುತ್ತಾ ಬರುತ್ತಿದೆ. ಈ ನಾಟಕ ಕಂಪನಿು ಗ್ರಾಮಸ್ಥರಲ್ಲಿ ಕಲೆಯ ಬೆಳವಣಿಗೆಗೆ ಪ್ರೋತ್ಸಾಹಿಸುತ್ತಿದೆ. ಈಗಲೂ ಕೂಡಾ ಗ್ರಾಮದ ಮುಖಂಡರಾದ ಡಿ ಟಿ ಪಾಟೀಲ ಕರಗಾಂವ, ಎಸ್ ಆರ್ ಪಾಟೀಲ ಕುಟುಂಬಗಳು ಉಸ್ತುವಾರಿ ಹೊಂದಿ ಎಲ್ಲಾ ಕಾರ್ಯಕ್ರಮಗಳನ್ನು ಅಚ್ಚುಕಟ್ಟಾಗಿ ನೆರವೆರಿಸುತ್ತಾರೆ. ಗ್ರಾಮದಲ್ಲಿ ಹಿಂದೂ ಮುಸ್ಲಿಂ ಸೇರಿ ಹಲವಾರು ಧಾರ್ಮಿಕ, ಜಾತಿ ಸಮುದಾಯಗಳು ಇದ್ದರೂ ಇಲ್ಲಿ ನಾವೆಲ್ಲರೂ ಒಂದು ಎಂಬ ತತ್ವದಡಿ ಎಲ್ಲರೂ ಒಂದಾಗಿ ಒಗ್ಗಟ್ಟಿನಿಂದ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಾರೆ. ಈ ಮೂಲಕ ಜಗತ್ತಿಗೆ ಒಂದಾಗಿ ಬಾಳಿರಿ ವಿಶ್ವ ಶಾಂತಿ ನೆಲೆಸಿರಿ ಎಂಬ ತತ್ವವನ್ನು ಈ ಕರಗಾಂವದ ಜಡಿಸಿದ್ದಾಶ್ರಮ ಸಾರುತ್ತಾ ಬರುತ್ತಿದೆ.

"ಒಂದಾಗಿ ಬಾಳಿರಿ ವಿಶ್ವ ಶಾಂತಿ ನೆಲೆಸಿರಿ "

  ಭೈರಪ್ಪ ಹಾಲಪ್ಪಗೋಳ ಕರಗಾಂವ
ಬಿ ಎಸ್ ಡಬ್ಲ್ಯು ಹಾಗೂ ಎಂ.ಎಸ್ ಡಬ್ಲ್ಯು
ಚಿನ್ನದ ಪದಕ ವಿಜೇತರು, ರಾಣಿ ಚನ್ನಮ್ಮ ವಿಶ್ವವಿದ್ಯಾಲಯ
ಬೆಳಗಾವಿ 

Thursday, 2 May 2019

ಸಂಕಷ್ಟದಲ್ಲಿರುವ ರೈತರಿಗೆ ಸಾಂತ್ವನ, ಆಪ್ತ ಸಲಹೆ ಅವಶ್ಯಕ

ಸಂಕಷ್ಟದಲ್ಲಿರುವ ರೈತರಿಗೆ ಸಾಂತ್ವನ, ಆಪ್ತ ಸಲಹೆ ಅವಶ್ಯಕ

ಭಾರತ ಕೃಷಿ ಪ್ರಧಾನ ರಾಷ್ಟ್ರ , ಇಲ್ಲಿ ಬಡತನ, ಅನಕ್ಷರತೆ ಹೆಚ್ಚಾಗಿರುವುದರಿಂದ ಹೆಚ್ಚಿನ ಜನರಿಗೆ ಕೃಷಿ ಕಾರ್ಯ ಬಿಟ್ಟು ಬೇರೆ ಉದ್ಯೋಗ ಗೊತ್ತಿಲ್ಲ. ಭಾರತದ ಕೃಷಿ ಮಾನ್ಸೂನ್ ಮಳೆಯೊಂದಿಗೆ ಆಡುವ ಜೂಜಾಟವಾಗಿದೆ. ಒಂದು ಸಲ ವಿಪರೀತ ಮಳೆಯಾಗಿ ಹಾಳಾಗುತ್ತದೆ. ಒಮ್ಮೆ ಸತತ ಹತ್ತು ವರ್ಷಗಳವರೆಗೆ ಬರಗಾಲ  ಹೀಗಾಗಿ ರೈತರು ಕಷ್ಟಪಟ್ಟು ಬೆಳೆದ ಬೆಳೆ ಹಾನಿಯಾಗಿ ಕೈಗೆ ಬಂದ ತುತ್ತು ಬಾಯಿಗೆ ಬರದಂತೆ ಹಲವಾರು ನೈಸರ್ಗಿಕ ವಿಕೋಪಗಳು, ಮಾನವ ನಿರ್ಮಿತ ವಿಕೋಪಗಳು ಕಾರಣವಾಗುತ್ತವೆ.
                             ಪ್ರಮುಖ ನೈಸರ್ಗಿಕ ಮತ್ತು ಮಾನವ ನಿರ್ಮಿತ ವಿಕೋಪಗಳು ಮತ್ತು ಕೌಟುಂಬಿಕ ಮತ್ತು ಸಾಮಾಜಿಕ ಆರ್ಥಿಕ ಸಮಸ್ಯೆಗಳು ಎಂದರೆ ಬರಗಾಲ, ಪ್ರವಾಹ, ಭೂಕಂಪ, ಚಂಡಮಾರುತ, ಅತಿಯಾದ ಭೂ ಸವಕಳಿ, ಭೂ ಕುಸಿತ, ಬೆಳೆ ಹಾನಿ, ಬೆಲೆ ಕುಸಿತ, ಕೀಟಗಳ ಹಾವಳಿ, ಕೊಳವೆ ಬಾವಿಗಳ ವಿಫಲತೆ, ಅತಿಯಾದ ಸಾಲ, ಅಧಿಕ ಬಡ್ಡಿ, ಸಾಲ ವಸೂಲಿಗೆ ಮನೆಗೆ ಬ್ಯಾಂಕ್ ಅಧಿಕಾರಿಗಳ ಬೇಟಿ, ಮೇವಿನ ಕೊರತೆ, ನೀರಿನ ಸಮಸ್ಯೆ, ಅನಾರೋಗ್ಯ, ಹೆಚ್ಚಿನ ಮನೆಖರ್ಚುಗಳು, ಮಕ್ಕಳ ವಿವಾಹ ಮತ್ತು ಶಿಕ್ಷಣ ಖರ್ಚು, ಕೃಷಿ ಸಲಕರಣೆಗಳ ಕೊರತೆ, ಸಾರಿಗೆ ಸಂಪರ್ಕ ಕೊರತೆ, ಬಡತನ , ಕಡಿಮೆ ಇಳುವರಿ ಹೀಗೆ ಹೇಳುತ್ತಾ ಹೋದರೆ ಸಮಸ್ಯೆಗಳ ಸರಮಾಲೆಯೇ ಕಂಡು ಬರುತ್ತದೆ. ಅಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ರೈತರು ಕೃಷಿ ಚಟುವಟಿಕೆಯಿಂದ ವಿಮುಖರಾಗಿ ಬೇರೆ ಉದ್ಯೋಗದಲ್ಲಿ ತೊಡಗಿಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಕೆಲವೊಮ್ಮೆ ದುಡುಕಿನ  ನಿರ್ಧಾರದಿಂದ ಆತ್ಮಹತ್ಯೆ ಯಂತಹ ಪ್ರಯತ್ನಕ್ಕೆ ಕೈ ಹಾಕುತ್ತಾರೆ ಆಗ ರೈತರಿಗೆ ಸಾಂತ್ವನ, ಆಪ್ತ ಸಲಹೆ, ಸೂಕ್ತ ಪರಿಹಾರ, ಮಾರ್ಗದರ್ಶನ ನೀಡುವುದು ಅವಶ್ಯಕವಾಗುತ್ತದೆ.
                   ರೈತರ ಆತ್ಮಹತ್ಯೆ ಪ್ರಕರಣಗಳು ಇತ್ತೀಚೆಗೆ ಸಾಕಷ್ಟು ಹೆಚ್ಚಿನ ಸಂಖ್ಯೆಯಲ್ಲಿ ಕಂಡು ಬರುತ್ತಿದ್ದು. ಕೃಷಿ ಅಧಿಕಾರಿಗಳು ಕ್ಷೇತ್ರ /ರೈತರ ಸ್ಥಳಗಳಿಗೆ ಬೇಟಿ ನೀಡಿ ಸೂಕ್ತ ಸಲಹೆ, ಸಾಂತ್ವನ ನೀಡುವುದು ಅತ್ಯವಶ್ಯಕವಾಗಿದೆ. ಬರಪೀಡಿತ ಪ್ರದೇಶಗಳಲ್ಲಿ ಅಂತೂ ಸಮಸ್ಯೆಗಳಿಗೆ ಹೇಳಿ ಮಾಡಿಸಿದ  ಪ್ರದೇಶದಂತಿದೆ. ಅಂತಹ ಪ್ರದೇಶಗಳಲ್ಲಿ ರೈತರಿಗೆ ಸೂಕ್ತ ಸಲಹೆಗಳು, ಮಾರ್ಗದರ್ಶನ ನೀಡುವುದು ಅನಿವಾರ್ಯವಾಗಿದೆ.
      ಮೇಲ್ಕಂಡ ಕೃಷಿ ವಿಚಾರಗಳಿಗೆ ಮಾನಸಿಕ ಒತ್ತಡ, ಖಿನ್ನತೆ, ಅಂಜಿಕೆ, ಭಯ, ಅಳು, ಜಿಗುಪ್ಸೆ, ಕೊರಗುವಿಕೆ, ಮರೆಯುವಿಕೆ ಸೇರಿ ಮುಂತಾದ ಮಾನಸಿಕ ಒತ್ತಡಕ್ಕೆ ರೈತರು ಒಳಗಾಗುತ್ತಾರೆ. ಇದರಿಂದ ವಿಚಲಿತರಾಗಿ ಆತ್ಮಹತ್ಯೆ ಯತ್ನ ಮಾಡುವ ಘಟನೆಗಳನ್ನು ಗಮನಿಸಿದ್ದೇವೆ. ಇವುಗಳಿಂದ ಮುಕ್ತಿ ಹೊಂದಲು, ರೈತರು ಮತ್ತೆ  ಕೃಷಿಯಲ್ಲಿ ಸಕ್ರೀಯರಾಗಬೇಕಾದರೆ ಅವರಿಗೆ ಮಾನಸಿಕ ಬೆಂಬಲದ ಅವಶ್ಯಕತೆ ಇರುತ್ತದೆ . ಅವರ ಭಾವನೆಗಳಿಗೆ ಸ್ಪಂದಿಸುವ ಕಾರ್ಯ ನಡೆಯಬೇಕಿದೆ. ರೈತರು ಸೂಕ್ತ ಸಲಹೆಯ ಕಾತರದಲ್ಲಿರುತ್ತಾರೆ ಆಗ ರೈತರಿಗೆ ಕೃಷಿ ಚಟುವಟಿಕೆಗಳಿಗೆ ಪ್ರೋತ್ಸಾಹಿಸಿದಾಗ ಅವರು ತಮ್ಮ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಮೂಲಕ ಕೃಷಿಯಲ್ಲಿ ಉತ್ತಮ ಜೀವನ ಕಟ್ಟಿಕೊಳ್ಳುವ ನಿಟ್ಟಿನಲ್ಲಿ ಕೆಲಸಗಳಾಗಬೇಕು.
              ಕಷ್ಟ ಪಟ್ಟು ಸಾಲ ಮಾಡಿ ಬೆಳೆದ ಬೆಳೆ ಅತಿಯಾದ ಮಳೆ, ಬರಗಾಲ ಸೇರಿ ನೈಸರ್ಗಿಕ ವಿಕೋಪಗಳಿಂದ ಹಾನಿಯಾದಾಗ ಆಗ ರೈತರಿಗೆ ಜಗತ್ತೇ ಕಳಚಿ ಬಿದ್ದಂತಾಗುತ್ತದೆ. ಹಾಗೂ ಸಾಲ ಮಾಡಿ ಕೊಳವೆ ಬಾವಿ ಕೊರೆಯುವಾಗ ನೀರು ದೊರೆಯದಿದ್ದರೆ ರೈತರು ಮಾನಸಿಕ ಕಾಯಿಲೆಯಿಂದ ಬಳಲುವ ಲಕ್ಷಣಗಳು ಕಂಡು ಬಂದಾಗ ಕೃಷಿ ಅಧಿಕಾರಿಗಳು ಮಾತ್ರ ಸಾಂತ್ವನ, ಸಲಹೆ ಹೇಳದೇ ನೆರೆಹೊರೆಯ ಜನರು ಕೂಡಾ ಸಂಕಷ್ಟದಲ್ಲಿರುವ ರೈತರಿಗೆ ಸಾಂತ್ವನ ಹೇಳಿ ಅವರಿಗೆ ಮಾನಸಿಕ ಬೆಂಬಲ ನೀಡುವುದು ಎಲ್ಲರ ಕರ್ತವ್ಯವೂ ಆಗಿದೆ.


ಆಪ್ತಸಮಾಲೋಚನೆ/ಕೃಷಿ ಸಲಹೆ ಎಲ್ಲಿ ಲಭ್ಯ?
-ರೈತ ಸಂಪರ್ಕ ಕೇಂದ್ರ
-ಕೃಷಿ ಮಹಾವಿದ್ಯಾಲಯ ಮತ್ತು ವಿಶ್ವವಿದ್ಯಾಲಯಗಳು
-ಕೃಷಿ ಸಂಬಂಧಿತ ಸರ್ಕಾರೇತರ ಸಂಸ್ಥೆಗಳು
-ಮನೋ ವೈದ್ಯರು
-ವೈದ್ಯಕೀಯ ಸಮಾಜ ಕಾರ್ಯಕರ್ತರು
-ಸಮಾಜಕಾರ್ಯಕರ್ತರು
-ಮಾನಸಿಕ ತಜ್ಞರು
-ಕೃಷಿ ಮತ್ತು ತೋಟಗಾರಿಕೆ ಇಲಾಖೆ
-ಪ್ರಗತಿಪರ ರೈತರು
-ಕೃಷಿ ವಿಷಯಗಳ ತಜ್ಞರು ಮತ್ತು ಉಪನ್ಯಾಸಕರು
-ರೈತ ನಾಯಕರು
 ಮುಂತಾದ ಕಡೆ


ಆಪ್ತ ಸಮಾಲೋಚನೆಯಲ್ಲಿ ಚರ್ಚಿಸಬಹುದಾದ ವಿಷಯಗಳು
-ಲಾಭದಾಯಕ ಬೆಳೆ ಬೆಳೆಯುವ ಕುರಿತು ಮಾರ್ಗದರ್ಶನ
-ಕೃಷಿ ಕ್ಷೇತ್ರದಲ್ಲಿನ ನಷ್ಟ ಪರಿಹಾರ ಪಡೆಯುವ ಕುರಿತು
-ವಿಕೋಪ ನಿರ್ವಹಣೆ ಮತ್ತು ಸೂಕ್ತ ಪರಿಹಾರ ಕುರಿತು ಸಲಹೆ
-ಸರ್ಕಾರದ ಕೃಷಿ ಸಂಬಂಧಿತ ಯೋಜನೆಗಳ ಬಗ್ಗೆ
-ಉತ್ತಮ ಕೃಷಿ ನಿರ್ವಹಣೆಗೆ ಸಲಹೆಗಳು
-ಮಾನಸಿಕ ಒತ್ತಡ, ಖಿನ್ನತೆ ನಿವಾರಣೆ
-ವೈಜ್ಞಾನಿಕ ಕೃಷಿ ಸಲಕರಣೆಗಳು
-ಮಣ್ಣಿನ ಫಲವತ್ತತೆ ಹೆಚ್ಚಿಸಲು ಸಲಹೆ
-ಕೃಷಿಯೊಂದಿಗೆ ಕುಟುಂಬ ನಿರ್ವಹಣೆ
-ಹಣಕಾಸಿನ ನಿರ್ವಹಣೆ
-ಅಲ್ಪಾವಧಿ ಬೆಳೆ ಮತ್ತು ಲಾಭದ ಬೆಳೆಗಳ ಕುರಿತು
-ಕೃಷಿ ಯೊಂದಿಗೆ ಉಪಕಸಬುಗಳ ನಿರ್ವಹಣೆ
-ಪರಿಹಾರ
-ಮಣ್ಣು ಪರೀಕ್ಷೆ
-ಹನಿ ನೀರಾವರಿ ಮತ್ತು ತುಂತುರು ನೀರಾವರಿ ಸೌಲಭ್ಯ
-ಸೂಕ್ತ ಮಾನಸಿಕ ಬೆಂಬಲ
-ಕೃಷಿ, ಕೌಟುಂಬಿಕ ಸಮಸ್ಯೆಗಳು ಮತ್ತು ಪರಿಹಾರಗಳು
ಮುಂತಾದವು



ರೈತರಿಗೆ ಸಾಂತ್ವನ /ಆಪ್ತಸಲಹೆಯ ಅವಶ್ಯಕತೆಗಳು
1)ಕೃಷಿ ಕ್ಷೇತ್ರದಲ್ಲಿ ಮುಂದುವರೆಯಲು ಪ್ರೋತ್ಸಾಹ ನೀಡುತ್ತದೆ.
2)ಕೃಷಿ ಕಾರ್ಯದಲ್ಲಿ ಉತ್ಸಾಹದಿಂದ ಮುಂದುವರೆಯಲು
3)ಮನೋ ಸಾಮಾಜಿಕ ಬೆಂಬಲ ನೀಡುತ್ತದೆ
4)ಒತ್ತಡ, ಖಿನ್ನತೆ ಸೇರಿ ಮಾನಸಿಕ ಸಮಸ್ಯೆಗಳಿಂದ ಮುಕ್ತವಾಗಲು
5)ಕೃಷಿಯಲ್ಲಿ ಸುಧಾರಣೆ ತರಲು ಸೂಕ್ತ ಸಲಹೆಗಳನ್ನು ಪಡೆಯಲು
6)ಹೊಸ ತಂತ್ರಜ್ಞಾನ, ಕೃಷಿ ಸಲಕರಣೆಗಳ ಬಗ್ಗೆ ವಿಶೇಷ ಜ್ಞಾನ ಪಡೆದುಕೊಳ್ಳಲು
7)ತಮ್ಮ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಪಡೆಯಲು ಸಹಾಯಕ.
8)ಆರ್ಥಿಕ ಸಂಕಷ್ಟಗಳಿಗೆ ಪರಿಹಾರ ಕಂಡುಕೊಳ್ಳಲು ಸಹಾಯಕ
9)ಕೃಷಿಯೊಂದಿಗೆ ಕೌಟುಂಬಿಕ ನಿರ್ವಹಣೆ  ಮಾಡಲೂ ಸಲಹೆ
10)ರೈತರ ಮನೋ ಸ್ಥೈರ್ಯ ಹೆಚ್ಚಿಸಲು ಸಹಾಯಕ
ಮುಂತಾದವು.

ಸಂದಿಗ್ಧ ಪರಿಸ್ಥಿತಿಯಲ್ಲಿರುವ ರೈತರಿಗೆ ಇಂದಿನ ಆಧುನಿಕ ದಿನಮಾನಗಳಲ್ಲಿ ಸಾಂತ್ವನ, ಸಲಹೆ, ಆಪ್ತ ಸಮಾಲೋಚನೆಯ ಅವಶ್ಯಕತೆ ಇದ್ದು ರೈತರು ಸೂಕ್ತ ಸಲಹೆ ಪಡೆದು ತಮ್ಮ ಸಮಸ್ಯೆಗಳನ್ನು ಪರಿಹರಿಸಿಕೊಂಡು ಕೃಷಿ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಲಿ, ಕೃಷಿ ಇಲಾಖೆ ಕೂಡಾ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ರೈತ ಸ್ನೇಹಿ, ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿದರೆ ರೈತರ ಕಲ್ಯಾಣ ಆಗುವುದರಲ್ಲಿ ಯಾವುದೇ ಸಂಶಯವಿಲ್ಲ. ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ರೈತ ಸಂಪರ್ಕ ಕೇಂದ್ರಗಳಲ್ಲಿ, ಕೃಷಿ ವಿಶ್ವವಿದ್ಯಾಲಯ ಮತ್ತು ಕಾಲೇಜುಗಳಲ್ಲಿ , ಮಾನಸಿಕ ಆಸ್ಪತ್ರೆಗಳಲ್ಲಿ, ಸರ್ಕಾರ ಮತ್ತು ಸರ್ಕಾರೇತರ ಸಂಸ್ಥೆಗಳು ರೈತರಿಗೆ ಮಾನಸಿಕ ಬೆಂಬಲ ನೀಡಲು ಮುಂದಾಗಬೇಕಾಗಿದೆ. ಅನ್ನ ನೀಡುವ ರೈತನಿಗೆ ಸಮಸ್ಯೆ ಆದರೆ ಅದು ಇಡೀ ಮಾನವ ಸಮುದಾಯಕ್ಕೆ ಸಮಸ್ಯೆ ಇದ್ದಂತೆ ಎಲ್ಲ ರೈತರೂ ಕೂಡಾ ಸುಖದಿಂದ ಬಾಳಲಿ ಎನ್ನುವುದೇ ನನ್ನ ಆಶಯ.



ಭೈರಪ್ಪ ಹಾಲಪ್ಪಗೋಳ ಕರಗಾಂವ. ತಾ. ಚಿಕ್ಕೋಡಿ ಜಿ. ಬೆಳಗಾವಿ
ಬಿ ಎಸ್ ಡಬ್ಲ್ಯು ಹಾಗೂ ಎಂ.ಎಸ್ ಡಬ್ಲ್ಯು ಚಿನ್ನದ ಪದಕ ವಿಜೇತರು
ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ಬೆಳಗಾವಿ